Tuesday, November 12, 2024

ಕನ್ನಡ ನಾಡೊಂದು ಬೆಲ್ಲದಚ್ಚು!



ಕನ್ನಡನಾಡು ಸಿಹಿ ಬೆಲ್ಲದ ಅಚ್ಚು.

ಮಾಟವಾದ ಸವಿ ಅಚ್ಚುಮೆಚ್ಚು..


ಈ ಬೆಲ್ಲದಚ್ಚಿನ ಹಿಂದೆ...

ಬಂಗಾರದ ನೆಲವ ಹದ ಮಾಡಿ,

ಬಸಿದ ಬೆವರಿನ ಶ್ರಮ ಸುರಿದು

ಕೃಷ್ಣೆ ಕಾವೇರಿ ನೇತ್ರೆಯ ನೀರೆರೆದು

ಕಬ್ಬು ಬೆಳೆದವರು ಕದಂಬರಾದಿ ಒಡೆಯರು...


ಆಲೆಮನೆ ಕಟ್ಟಿ, ಕಬ್ಬಿನಾಲನು ಕುದಿಸಿ

ಹದಗೊಳಿಸಿ ಅಚ್ಚಾಗಿಸಿದವರು ನಾಲ್ವಡಿ, 

ವಿಶ್ವೇಶ್ವರಯ್ಯ ಮೊದಲಾದವರು..

ಅದಕೆ ಸಿಹಿ ಕಂಪ ತುಂಬಿದವರು 

ಪಂಪ ರನ್ನ ಬೇಂದ್ರೆ ಕುವೆಂಪು.. 


ಕನ್ನಡನಾಡು, ಕನ್ನಡತನ 

ಎನ್ನುವುದು ಸಿಹಿ ಸವಿ ಬೆಲ್ಲದಚ್ಚು..

"ಒಂದು ದೇಶ"ವೆಂಬ ಕವಿದ ಮಬ್ಬು

"ಶ್ರೇಷ್ಠ ಭಾರತ"ದ ವ್ಯಸನದ

ಗಾಣದಲ್ಲಿ ಸಿಲುಕಿ ನಲುಗಿರುವ ಕಬ್ಬು!

 

Delimitation ಎನ್ನುವ ಉಪ್ಪಿನಿಂದಾದ 

ಇಂದಿನ ಭಾರತವೆಂಬ ಕಡಲಿನಲ್ಲಿ

ತನ್ನ ಸಿಹಿಯನ್ನು ಕಳೆದುಕೊಳ್ಳುತ್ತಾ.. 

ಕಡಲಿನ ಉಪ್ಪನ್ನೂ ಕಳೆಯಲಾಗದೆ..

ಕರಗಿ ಮರೆಯಾಗುತ್ತಿರುವ ಬೆಲ್ಲದಚ್ಚು!

ನಾ ಕನ್ನಡಿ!

 



ನಾ ಕನ್ನಡಿ..

ನೀನು ನಕ್ಕಾಗ ನಗುವ

ನೀನು ಅತ್ತಾಗ ಅಳುವ

ನೀನೇ ನಾನಾಗಿರುವ

ನನ್ನದೆನ್ನುವ ಏನೂ ಇಲ್ಲದ

ನಾನು ಕನ್ನಡಿ..


ಹಾಂ! ಎಚ್ಚರ.. 

ಅಸಡ್ಡೆಯಿಂದ ಬೀಳಿಸಿದರೆ 

ಒಡೆದು ಹೋದೀತು ಕನ್ನಡಿ.. 

ಕಲಕಿ ಹೋದೀತು ಬಿಂಬಗಳು..

ಬೆಸೆಯಲು ಆದೀತೆ ಹಿಂದಿನಂತೆ.. 

ಮತ್ತೆಂದಿನಂತೆ?


ಸಿಂಗಾರ ಬಂಗಾರ ಬೇಡ

ಆಗಾಗ ಕೂಡಿಕೊಂಡ ಧೂಳನ್ನು

ಒರೆಸುವಷ್ಟಾದರೂ ಸಮಯವಿರಲಿ

ಸಹನೆಯಿರಲಿ

Saturday, March 9, 2024

ಶಿವರಾತ್ರಿಯಂದು ಅಮ್ಮನ ಬಯಕೆ!




ತ್ರೇತಾಯುಗದಲ್ಲಿ...

ಅಮ್ಮ...

ಶಿವನ ಲಿಂಗ ಬಯಸಿದಳಂತೆ.

ಮಗ.. 

ತಪಸ್ಸು ಮಾಡಿ ಆತ್ಮಲಿಂಗವನ್ನೇ 

ತರಲು ಮುಂದಾದನಂತೇ!


ಕಲಿಯುಗದಲ್ಲಿ...

ಅಮ್ಮ,

ಶಿವರಾತ್ರಿಗೆ ಶಿವನ 

ದರ್ಶನ ಬಯಸಿದಳಂತೆ..

ಮಗ..

ಶಿವನ ಪ್ರತಿಮೆಯನ್ನೇ ಮಾಡಿ

ಅಮ್ಮನ ಕೈಗಿಟ್ಟನಂತೆ!

ಮಹಿಳಾ ದಿನಾಚರಣೆ



ಇವತ್ತು ಮಹಿಳಾ ದಿನಾಚರಣೆ ಅಂತೆ.. 

ಯಾವನ್ಲಾ ಇದನ್ನು ಶುರು ಮಾಡಿದ್ದು?

ನಮ್ಮನೇಲಿ ಬೆಳಗ್ಗೆ ಏಳೋದೂ 

ಇವಳ ಮೊಬೈಲ್ ಅಲಾರಾಂ ಹೊಡೆದಾಗಲೆ..


ಎದ್ದು ಕಾಫಿ ಕುಡಿಯೋದೂ 

ಇವಳು ಕೊಟ್ಟಾಗಲೆ..

ಇವತ್ತು ಯಾವ ಅಂಗಿ ಹಾಕ್ಕೊಬೇಕೂ 

ತೀರ್ಮಾನ ಮಾಡೋದೂ ಇವಳೇ..


ತಿಂಡಿ ಏನು ಮಾಡಬೇಕೋ 

ತೀರ್ಮಾನ ಮಾಡೋದೂ ಇವಳೇ..

ಅಡುಗೆಗೆ ಎಷ್ಟು ಉಪ್ಪು, ಕಾಫಿಗೆ ಎಷ್ಟು ಸಕ್ಕರೆ ಅಂತಾ 

ತೀರ್ಮಾನ ಮಾಡೋದೂ ಇವಳೇ..


ನಾವೂ ತಿಂಡಿ ಊಟ ಮಾಡೋದು 

ಇವಳು ಬಡಿಸಿದಾಗಲೆ.. ಬಡಬಡಿಸಿದಾಗಲೆ..

ನಮ್ಮ ಮನೆ ಬಾಗಿಲು, ನನ್ನ ಜೇಬಿನ ಪರ್ಸು.. 

ಎಲ್ಲಾದಕ್ಕೂ ಕೀಲಿ ಇರೋದು ಇವಳ ಕೈಲೇ..


ಕಡೆಗೆ.. 

ನಾನು ಮಲಗೋದೂ ಕೂಡಾ 

"ಇನ್ನೂ ಎಷ್ಟೊತ್ತು ಕಂಪ್ಯೂಟರ್ ಮುಂದಿರ್ತೀರಾ.. 

ಬಂದು ಬಿದ್ಗೊಳ್ಳಿ"  ಅಂದಾಗಲೇ..


ಹೀಗೆ ಪ್ರತಿದಿವಸ ಕೂಡಾ 

ನಮ್ಮನೇಲಿ ಮಹಿಳಾ ದಿನಾಚರಣೆ.. 


ಅಂತಾದ್ರಲ್ಲಿ...

ಇವತ್ತು ಮಹಿಳಾ ದಿನಾಚರಣೆ ಅಂತೆ.. 

ಯಾವನ್ಲಾ ಅವ್ನು.. ಇದನ್ನು ಶುರು ಮಾಡಿದ್ದು?

Wednesday, February 14, 2024