Sunday, December 10, 2023

ಧರ್ಮ ಅಧರ್ಮ


ಅಧರ್ಮದಿಂದ 

ಅಭಿಮನ್ಯುವ ಕೊಲೆಗೈದ

ಕರ್ಣ ಸಾಯುವುದು

ನನಗೂ ಸಂಭ್ರಮ..

ಆದರೆ...

ಆಣೆಯಲ್ಲಿ ಕಟ್ಟಿ

ಕವಚಗಳ ಕಳಚಿ

ತೇರಗಾಲಿ ಹೂತಾಗ 

ಬಾಣ ಹೂಡಿ

ಕೊಂದದ್ದಕ್ಕೆ ಸಂಕಟ...


ಅಧರ್ಮದಿಂದ

ಅರಗಿನರಮನೆ ಸುಟ್ಟ

ದುರ್ಯೋಧನನ ಸಾವು

ನನಗೂ ಸಂಭ್ರಮ..

ಆದರೆ..

ನಿಯಮ ತೊರೆದು

ತೊಡೆಯ ಮುರಿದು

ಕೊಂದಿದ್ದಕ್ಕೆ ಸಂಕಟ... 


ಅಧರ್ಮದಿಂದ

ಸುಗ್ರೀವನ ಓಡಿಸಿ

ರುಮೆಯ ಸೆರೆ ಹಾಕಿದ

ವಾಲಿಯ ಸಾವು

ನನಗೂ ಸಂಭ್ರಮ..

ಆದರೆ...

ಮರೆಯಲಡಗಿ

ಬಾಣ ಬಿಟ್ಟು

ಕೊಂದಿದ್ದಕ್ಕೇ ಸಂಕಟ..


ಅಧರ್ಮದಿಂದ

ಮಂದಿರ ಮುರಿದೆಡೆಯಲ್ಲಿ

ರಾಮಮಂದಿರ 

ನನಗೂ ಸಂಭ್ರಮ

ಆದರೆ..

ಕಾನೂನು ಮುರಿದು

ಬಾಬರಿ ಮಸೀದಿ

ಕೆಡವಿದ್ದು ಸಂಕಟ.. 


ಧರ್ಮ ಸ್ಥಾಪನೆಗೆ (?)

ಅಧರ್ಮದ ಮಾರ್ಗ 

ಸಂಭ್ರಮ ಮೀರಿದ ಸಂಕಟ..

ಗುರಿ ಮುಖ್ಯ, ಮುಟ್ಟುವ ಮಾರ್ಗವೂ ಮುಖ್ಯ ಎನ್ನುವವರಿಗೆ ಇಂದು

ಸಂಭ್ರಮಕ್ಕೆ ಮೀರಿದ ಸಂಕಟ..

No comments:

Post a Comment